Thursday 26 November 2009

ತ್ಯಾಗ ಬಲಿದಾನದ ಸಂಕೇತ


ಹಬ್ಬ ವಿಶ್ವದ ಪ್ರತಿಯೊಬ್ಬರಲ್ಲೂ ಸಂತೋಷ ಸಂಭ್ರಮ ತಂದು ಕೊಡುವ ಆಚರಣೆ.ಸಾಕಷ್ಟು ಸರ್ತಿ ನಮಗೆ ಹಬ್ಬದ ಬಗ್ಗೆ ವಾಖ್ಯಾನಿಸುವಾಗ ಸಣ್ಣ ಗೊಂದಲ ಉಂಟಾಗುತ್ತದೆ,ಯಾವ ರೀತಿ ವಿವರಿಸ ಬೇಕು ಎಂದು ಅರಿಯದ ಮನಸ್ತತ್ವ ಉಂಟಾಗುತ್ತದೆ.ಆದರೆ ನಮ್ಮಂತಹ ಪಾಮರರು ಹೆಚ್ಚಿನ ಪ್ರಮಾಣದಲ್ಲಿ ಈ ವಿಶ್ವದಲ್ಲಿ ಇರೋದು,ಅವರು ತಿಳಿದಿರೋದು ಹಬ್ಬ ಅಂದ್ರೆ ದೇವ್ರು,ಖುಷಿ,ಬಣ್ಣ ಬಣ್ಣ ,ಉತ್ಸಾಹ ಹಾಗೂ ಉಲ್ಲಾಸ ! ಪ್ರಪಂಚದ ಎಲ್ಲ ಧರ್ಮದ ಜನರಲ್ಲೂ ಈ ಅಂಶ ಇದ್ದೆ ಇದೆ.ಕಾರಣ ಅವರು ಮಾನವರು...ನೂರಕ್ಕೆ ನೂರರಷ್ಟು ಸಾಮಾನ್ಯರು...!
*  ಬಲಿದಾನದ ಹಬ್ಬ ಬಕ್ರೀದ್ ! ಮಹದೀಯರ ಅನೇಕ ವಿಶೇಷ ಹಬ್ಬಗಳಲ್ಲಿ ಇದು ಒಂದು.ಮುಸ್ಲೀಮರ ಇದು ಪಂಚಾಂಗದ ಅನ್ವಯ ಇದು ಹನ್ನೆರಡನೆಯ ತಿಂಗಳಲ್ಲಿ ಅಂದರೆ ಜಿಲ್ಹಾಜ್ ಮಾಸದ ಹತ್ತನೆಯ ದಿನ ಬರುತ್ತದೆ. 'ಈದುಲ್ ಅಜ್ ಹ' ಬಕ್ರೀದ್ ಹಬ್ಬದ ಮೂಲ ಹೆಸರು.ಅಜ್ ಹ ಅಂದ್ರೆ ವಿಶ್ವವನ್ನು  ರಕ್ಷಿಸುತ್ತಿರುವ ಭಗವಂತ (ಅಲ್ಲಾ ಹ್)  ನಿಗೆ ಸಮರ್ಪಿಸುವ ಬಲಿದಾನ ಎನ್ನುವ ಅರ್ಥ ಬರುತ್ತದೆ.ಈದ್ ಉಲ್ ಖುರ್ಬಾನಿ ಎಂದು ಸಹ ಇದನ್ನು ಕರೆಯುತ್ತಾರೆ.ಒನ್ಸ್ ಅಗೇನ್ ಖುರ್ಬಾನಿ ಎಂದರೆ ಬಳಿ ಎನ್ನುವ ಅರ್ಥ ಪಡೆದು ಕೊಳ್ಳುತ್ತದೆ..ಒಟ್ಟಾರೆ ಬಕ್ರೀದ್ ಬಲಿದಾನದ ಪ್ರತೀಕ.
ಕಥೆ ಹೀಗಿದೆ..
ಇಸ್ಲಾಂ ಧರ್ಮದಲ್ಲಿ ದೇವದೂತ ( ಪ್ರವಾದಿ) ಎನ್ನುವ ಹೆಸರು ಪಡೆದವರಲ್ಲಿ ಹಜರತ್ ಇಬ್ರಾಹಿಂ ಸಹ ಮುಖ್ಯರಾಗಿದ್ದಾರೆ.ಇವರ ಬಗ್ಗೆ ತಿಳಿಯ ಬೇಕಾದರೆ ನಾವು ನಾಲ್ಕು ಸಾವಿರ ವರ್ಷದ  ಹಿಂದೆ ಹೋಗ ಬೇಕು.ಇಬ್ರಾಹಿಂ ಇರಾಕ್ ದೇಶದಲ್ಲಿ ಜನ್ಮಿಸಿದ್ದರು..ಅವರು ಬದುಕಿದ್ದ ಕಾಲದಲಿ ಇರಾಕ್ ದೇಶ ಸಂಪತ್ಬರಿತವಾಗಿತ್ತು ,ಆದರೆ ನೈತಿಕವಾಗಿ ಮತ್ತು ಧಾರ್ಮಿಕವಾಗಿ ಕೆಳಗಿಳಿದಿತ್ತು..ಬಹುದೇವತಾರಾಧನೆ ,ರಾಜರು,ಧರ್ಮಾಧಿಕಾರಿಗಳು ತಮನ್ನು ತಾವು ದೇವರೆಂದು ಸ್ವಯಂ  ಘೋಷಿಸಿಕೊಂಡು ಸಾಮಾನ್ಯರ ಬದುಕನ್ನು ಮೂರಾಬಟ್ಟೆ ಮಾಡಿದ್ದ ಕಾಲ.ಹಣವಂತರ ಅಹಂಕಾರ ಎಲ್ಲೇ  ಮೀರಿತ್ತು.ಆ ಸಂದರ್ಭದಲ್ಲಿ ವಿಶ್ವಕ್ಕೆ ಅಲ್ಲಾ ಹ್  ಒಬ್ಬನೇ ದೇವ,ಇವರೆಲ್ಲ ಆತನ ಸೃಷ್ಟಿಗಳೇ ವಿನಃ ದೇವರಲ್ಲ..ಆತನ ಪ್ರೀತಿ ಗಳಿಸಲು ಅಧರ್ಮ,ದುರ್ಗುಣವನ್ನು ಹತ್ತಿರ ಸೆಳೆಯಗೊಡಬಾರದು,ಯಾವುದೇತ್ಯಾಗಕ್ಕಾಗಲಿ  ಸದಾ ಸಿದ್ಧರಾಗಿ ಇರಬೇಕು ಎನ್ನುವ ಸಂದೇಶ ಸಾಮಾನ್ಯರ ಮನದಲ್ಲಿ ಬಿತ್ತಿದ.ಒಳ್ಳೆಯವರಿಗೆ  ಕಾಲ ಎಲ್ಲಿದೆ ಅನ್ನುವ ಮಾತೊಇದೆಯಲ್ಲ,ಆತನ ಈ ವರ್ತನೆಗೆ ಸರ್ಕಾರ-ಶ್ರೀಮಂತರ ಕೆಂಗಣ್ಣು ಬಿದ್ದು ಆತನಿಗೆ ದೇಶದಿಂದ ಬಹಿಷ್ಕಾರ.
* ಧೃತಿಗೆಡಲಿಲ್ಲ ಇಬ್ರಾಹಿಂ .ಆತನ ಜೊತೆಯಾದಳು ಪತ್ನಿ ಹಾಜೀರಾ..ಇವರಿಗೊಬ್ಬ ಮಗ ಇಸ್ಮಾಯಿಲ್. ಒಮ್ಮೆ ದೇವರಿಗೆ ಇಬ್ರಹಂ ಅವರನ್ನು ಪರೀಕ್ಷೆ ಮಾಡ ಬೇಕು ಅಂತ ಅನ್ನಿಸಿತು.ತಕ್ಷಣ ಆತ ಭಕ್ತನ ಬಳಿ ಹೇಳಿದ್ದು ನೋಡು ನೀನು ನಿನ್ನ ಹೆಂಡತಿ-ಮಗುವನ್ನು ಬೆಂಗಾಡಿನಲಿ ಬಿಟ್ಟು  ನನ್ನ ಬಳಿ ಬಾ! ಆಗ ಆತ ಇಬ್ಬರನ್ನು ಮರಳು ಗಾಡಿನಲ್ಲಿ  ಬಿಟ್ಟು ಬಂದ,ಕುಡಿಯಲು  ಒಂದು ಹನಿ ನೀರಿಲ್ಲದ ಪ್ರದೇಶ.ಎಳೆಯ ಕಂದ ಹಸಿವಿನಿಂದ ಬಳಲಿತು,ದಯಾಮಯನಾದ  ದೇವನು ಅಂತಹ ಸ್ಥಳದಲ್ಲಿ ನೀರಿನ ಸೆಲೆಯನ್ನು ಉದ್ಭವ ಮಾಡಿದ.ಅದು ಈಗ ಮೆಕ್ಕಾ ನಗರಲ್ಲಿ ದೊರಕುವ  ಈ ಜಲವು  'ಅಬೆ ಜಮ್ ಜಮ್ ' ಹೆಸರಿನ ಪವಿತ್ರ ತೀರ್ಥವೆಂದು  ಪ್ರಸಿದ್ಧಿ ಪಡೆದಿದೆ.
* ಮತ್ತೊಮ್ಮೆ  ಇಬ್ರಾಹಿಮ್ ಕಾಲದತ್ತ ...!  ಇಸ್ಮಾಯಿಲ್ ದೊಡ್ಡವನಾದ,ದೇವರಿಗೆ ಪುನಃ ತನ್ನ ಭಕ್ತರನ್ನು ಪರೀಕ್ಷಿಸ ಬೇಕೆಂಬ ಆಸೆ.ಸರಿ ಆತ ಇಬ್ರಾಹಿಮ್ ಬಳಿ ನನಗೆ ನಿನ್ನ ಮಗನ ಬಳಿ ಬೇಕು ಕೊಡ್ತೀಯ ಅಂದಾಗ ಆತ ಸಮ್ಮತಿ ಕೊಟ್ಟ,ಆ ಬಾಲಕ ಇಸ್ಮಾಯಿಲ್ ಸಹ ಅಪ್ಪನ  ಆಸೆಯನ್ನು ಸಂತೋಷದಿಂದ ನೆರವೇರಿಸಲು ಸಿದ್ಧನಾದ.ಸರಿ ಇಸ್ಮಾಯಿಲ್ ವಧಾ ಸ್ಥಾನದ ಬಳಿಬಂದ ಇನ್ನೇನು ಇಬ್ರಾಹಿಮ್ ಮಗನ ತಲೆ ಕತ್ತರಿಸ ಬೇಕು ಆಗ ದೇವರ ಆಜ್ಞೆಯಂತೆ ಇತರ ದೇವದೂತರು ಆತನ ಮಗನ ಸ್ಥಾನದಲ್ಲಿ  ಕುರಿ ನಿಲ್ಲಿಸಿದರು.ಇದ್ಯಾವುದರ ಅರಿವೇ ಇಲ್ಲದೆ ಇಬ್ರಾಹಿಮ್ ದೇವರಿಗೆ ಬಲಿ ಕೊಟ್ಟರು.ಭಟ್ನ ಈ ತ್ಯಾಗ ಗುಣ ದೇವನಲ್ಲಿ ಅಪರಿಮಿತ ಪ್ರೀತಿ ಹುಟ್ಟುವಂತೆ ಮಾಡಿತು ಇಬ್ರಾಹಿಮ್ ಬಗ್ಗೆ!  ಆಬಳಿಕ ತಂದೆ ಮಕ್ಕಳು ಭಗವಂತನ ಹೃದಯದಲ್ಲಿ ಚಿರಸ್ಥಾಯಿ ...!
* ಬಕ್ರೀದ್ ಅಂದ್ರೆ ಬಲಿ ಕೊಡುವ ಹಬ್ಬ ಎಂದುತಿಳಿಯುವುದಕ್ಕಿಂತ  ಅದು ತ್ಯಾಗ ಬಲಿದಾನದ ಸಂಕೇತದ ಪ್ರತೀಕ ಎಂದು ಅರಿತರೆ ಹಬ್ಬದ ಆಚರಣೆಯ  ಮತ್ತಷ್ಟು ಉದಾತ್ತತೆ ಪಡೆದುಕೊಳ್ಳುತ್ತದೆ.ಹ್ಯಾಪಿ ಬಕ್ರೀದ್ !

Followers