Thursday, 13 March 2014

ಇನ್ನೇನು ಹೇಳಲಿ ನಾನು ?

ಪ್ರೀತಿಯ ಗೆಳೆಯ,


 ಹೃದಯ ಮಾತು ಕೇಳು ಕೇಳು ನನ್ನ ಚೆಲುವೆ .. ಕೇಳಿದರೆ ನೀನೆ ನಗುವೇ...! ಮಧ್ಯಾನ್ಹದಿಂದ  ಒಂದೇ ಸಮನೆ ಈ ಹಾಡು ಜ್ಞಾಪಕಕ್ಕೆ ಬರ್ತಾನೆ ಇದೆ ಕಣೋ. ಶುದ್ಧಾನು ಶುದ್ಧ ಪ್ರೇಮ ಗೀತೆಯನ್ನು   ನಾನು ಅಪ್ಪಿತಪ್ಪಿಯೂ ಯಾರ ಮುಂದೆ ಹಾಡು ಹೇಳುವುದಿರಲಿ  ಗುನುಗಳು ಉಹುಂ .... ಅಂತಹ ಯಾವ ಕೆಲಸವನ್ನು ಮಾಡಲೇ ಬಾರದು. ವೆರಿ ಡೇಂಜರ್. ಗೊತ್ತಲ್ಲ ಅವಿವಾಹಿತ ಹೆಣ್ಣಿನ ಸಂಕೋಲೆಗಳು ಹೇಗಿರುತ್ತೆ ಅಂತ. ಹೂ ತೋಟದ ಬೇಲಿಯನ್ನು ಹಾಯಲು ಸಾಕಷ್ಟು ದನಗಳು ಕಾದಿರುತ್ತವೆ.. ಆದರೆ ಅದಕ್ಕೆ ಮುಳ್ಳಿನ ಬೇಲಿ ತೊಡಿಸಿದರೆ ಹೂ ಸೇಫ್ ..! ಹಾಗೆ ಅವಿವಾಹಿತ ಹುಡುಗಿ ಕಥೆಯು ಸಹ.. ಎಲ್ಲರ  ಗಮನ, ಅನುಕಂಪ, ಅನುಭೂತಿ.. ಯಾವುದನ್ನು ಬೇಕಾದರೂ ಹೇಳ ಬಹುದು. ಆಕೆ ಬದುಕನ್ನು ಉದ್ದಾರ ಮಾಡುವ ಪಣ ತೊಟ್ಟಿರುವ ಸಂಖ್ಯೆ ಹೆಚ್ಚು ಆಕೆಗೆ ಅದು ಬೇಕಾಗಿ ಇರದೇ ಇದ್ದರು ಸಹ... ನೀನು ಸಹ ಒಬ್ಬ ಗಂಡಸು, ಆದರು ನಿನ್ನ ಬಳಿ ಇವೆಲ್ಲ ಯಾಕೆ ಹೇಳಿ ಕೊಳ್ಳುತ್ತಿದ್ದೇನೆ ಎಂಬುದರ ಅರಿವು ನಿನಗಿದೆ... ನಿನ್ನ ಪ್ರೀತಿ ನನಗೆ ಹಿತ ಅನ್ನಿಸಿದ್ದು ಅದಕ್ಕೆ ಕಾರಣವೋ .. ಇಲ್ಲ ಈ ಬೇಲಿ ಹಾಯಲು ಪ್ರಯತ್ನಿಸುವ   ಮೊದ್ದು ಗಳಿಗೆ  ಬುದ್ಧಿ ಕಲಿಸುವ  ಪ್ರಯತ್ನವೋ.. ಅವಿವಾಹಿತೆ ಎಂದು ಹೇಳಿದಾಗ ನನ್ನ ಬಗ್ಗೆ ತೋರುವ ಭಾವನೆ, ಒಸರಿಸುವ ಪ್ರಶ್ನೆಗಳ ಕಾರಂಜಿ.. ಉತ್ತರಿಸಲು   ಕಷ್ಟ ಅನ್ನಿಸುತ್ತದೆ..ಬದಲಾಗುವ ಮಾತಿನ ಶೈಲಿ , ತೋರಿಸುವ ಆಸ್ಥೆ  ಯಾಕೋ ಅಹಿತ ಮನಕ್ಕೆ !  ಅವರ ಪ್ರಶ್ನೆಗಳಿಂದ  ಪ್ರಶ್ನೆಗಳಿಂದ ದೂರ ಹೋಗಲು ನಿನ್ನ ಸಾಂಗತ್ಯ ಬೇಕಾಯ್ತ ನನಗೆ.. ಯಾಕೋ ಯಾವುದಕ್ಕೂ ಮನಸ್ಸಿಗೆ ಉತ್ತರ ಗೊತ್ತಿಲ್ಲ..  ಬುದ್ಧಿ ಮತ್ತು ಮನಸ್ಸು ಎರಡು ಚಂಚಲವಾಗಿದೆಯೋ ಅಥವಾ ಸ್ತಬ್ಧವಾಗಿದೆಯೋ   ಗೊತ್ತಿಲ್ಲದಂತಹ  ಪರಿಸ್ಥಿತಿ..  ಇವೆಲ್ಲವನ್ನೂ ಹೇಳುವ ನನ್ನ ಪ್ರಯತ್ನದ ಹಿಂದೆ ಯಾವುದೇ ಸ್ವಾರ್ಥ ಇಲ್ಲ.. ಹೇಳುವ ಮಾತುಗಳಲ್ಲಿ ನಿನಗೆ ಅರ್ಥವೇ ಇಲ್ಲ ಅನ್ನಿಸಿದರೆ ಈ ಮೇಲ್ ಓದಿ ನಕ್ಕು ಸುಮ್ಮನಾಗು.. ಬಿಗಿದಿಟ್ಟ ಭಾವನೆಗಳನ್ನು ಹೊರಗೆಡವ ಬೇಕು ಅಂತ ಅನ್ನಿಸುತ್ತಿತ್ತು   ..   ಮೊದಲು ಬರೆದು ಕೊಂಡು ನಂತರ  ನಿನಗೊಂದು ಮೇಲಿಸಿದೆ.... ಇನ್ನೇನು ಹೇಳಲಿ ನಾನು ?
 ಗೆಳತಿ .... 

Friday, 14 February 2014

ಪ್ಲೀಸ್ ಮಾತಾಡೆ..




ಲೇಯ್,

ಅಯ್ಯೋ ಛೆ .. ನಾನು ಬೇಕೂಂತಾ   ಮಾಡಿದ ಅನೇಕ ತಪ್ಪುಗಳಲ್ಲಿ ಇದು ಒಂದು ಕಣೆ.. ಸಾರಿ ಸಾರಿ ಸಾರಿ.. ಎಂದಿನ ಕೋಪದ  ಇಂದು  ಮಾತ್ರ ಮುಂದುವರೆಯೋದು ಪ್ಲೀಸ್ ಬ್ಯಾಡ ಬ್ಯಾಡ ಕಣೆ.. ಅದ್ಸರಿ ನಿನಗ್ಯಾಕೆ ಆ ಪರಿ ಕೋಪ ನಿನ್ನ ಗೆಳತಿ ಜೊತೆ ಮಾತಾಡಿದ್ರೆ.. ಥೂ!   ಪ್ರೀತಿಯಲ್ಲಿ ಅನುಮಾನ ಇರ ಬೇಕು ಕಣೆ ಆದ್ರೆ ನಿನ್ನಷ್ಟು   ಅಲ್ಲ! ಸಾರಿ ಸಾರಿ ಕಣೆ  ಬಂಗಾರಿ ನನ್ನ  ಹೃದಯ ಎಲ್ಲರಿಗು ಹಂಚಲು ನಾನೇನು ಫ್ಲರ್ಟಾ!
ಪ್ರೀತಿ ಮಾಡುವಾಗ ಎಷ್ಟೆಲ್ಲಾ ಕಾ ೦ಪ್ರೊ  ಆಗ್ತೀವಿ ಹುಡುಗರು, ಆದ್ರೆ ನೀವ್ ಮಾತ್ರ ದಿನೇದಿನೇ ಛಿ! ಅದೆಷ್ಟು ರಿಜಿಡ್! ಅಯ್ಯೋ ಅದ್ಯಾವ  ಜನ್ಮದಲ್ಲಿ ಅದೇನು ಪಾಪ ಮಾಡಿರ್ತೀವೋ ಹುಡುಗರಾಗಿ ಹುಟ್ಟಲು, ಅದರಲ್ಲೂ ಪ್ರೀತಿಸುವ ಹುಡುಗರಾಗಿ ಹುಟ್ಟಲು !!  ಪ್ಲೀಸ್ ಮಾತಾಡೆ.. ನೋಡು ಈ ಪತ್ರದಲ್ಲಿ ನನ್ನ  ಪ್ರೀತಿಯ ಬಡಬಡಿಕೆ   ಇದೆ ಅಂತ ನಿರ್ಲಕ್ಷ್ಯ ಮಾಡ ಬೇಡ ನನ್ನಾ.. ಬೇಜಾರಾಗುತ್ತೆ ಕಣೆ ನನಗೆ ನಿನ್ನ ಮೌನಾ  ಕಂಡ್ರೆ ! ಮಾತಾಡೆ.. ನಿನ್ನ ಪ್ರೀತಿಯ ಚಾಕೊಲೆಟ್ ಇಟ್ಟಿದ್ದೀನಿ.. ನಿನಗೆ ಪಿಂಕ್ ರೋಸ್ ಇಷ್ಟ ಅಲ್ವ ಅದನ್ನು ಸಹ ಜೊತೆ ಇಟ್ಟಿದ್ದೇನೆ  ಒಂದು ಬಂಚ್.. ಪತ್ರಕ್ಕೆ ಮುನ್ನ ಅವೆಲ್ಲ ನೋಡಿರ್ತೀಯ ಅಂತ ಗೊತ್ತು. ಪ್ಲೀಸ್ ಒಪ್ಪಿಸಿಕೊಳ್ಳೆ.. ನನ್ನ ಪ್ರೀತಿಯನ್ನು ಅಪ್ಪಿಕೊಳ್ಳೆ
 ನಿನ್ನವ..


ಹುಡುಗಾ..
ಇಷ್ಟೇನಾ ನೀ ನನ್ನನ್ನು ಅರ್ಥ ಮಾಡಿ ಕೊಂಡಿದ್ದು  .. ನಿಜ ಕಣೋ ನೀನು ಆ ಮಿಟಕಲಾಡಿ ಜೊತೆ ಕಿಸಿಕಿಸಿ ನಗುತ್ತಾ ಮಾತಾಡಿದಾಗ ಸಿಟ್ಟಿನಿಂದ   ಉರಿದಿದ್ದು ನಿಜ. ಆದರೆ ನನ್ನ ಕೋಪ ಶಾಂತ ಮಾಡುವುದಕ್ಕಿಂತ ಅವಳ ಜೊತೆ ಮಾತನಾಡೋಕೆ ಹೆಚ್ಚು ಗಮನ ನೀಡಿದರೆ ಉರಿಯಲ್ವ ನನಗೆ  ! ಹೆಣ್ಣುಮಕ್ಕಳಿಗೆ ಅನುಮಾನ ಅಂತ   ಅವನೇ ನಿನ್ನ ಫ್ರೆಂಡ್ ಆ ಪೆದ್ದನ ಬಳಿ ಹೇಳ್ತಾ ಇದ್ಯಂತೆ. ಅದನ್ನ ನನ್ನ ತಮ್ಮ ಬಂದು ಹೇಳಿದ ಆಗೆಷ್ಟು ಅಳು ಬಂತು ನನಗೆ ಗೊತ್ತಾ? ನೀ  ಎದುರು ಇದ್ದಿದ್ದಿದ್ದರೆ ನಿನ್ನ ಕೂದಲು ಜಪ್ಪಿ ಬಿಡೋಷ್ಟು ಉಗ್ರ ಕಾಳಿ  ಆಗಿದ್ದೆ. ಬಚಾವ್ ಆದೆ ನೀನು! ಆದರೆ ಒಂದು ತಿಳ್ಕೋ ನನಗೆ ಅಸೂಯೆ  ಅಸಹನೆ ಅಲ್ಲ.. ಅದು ಪ್ರೀತಿಯ ಮತ್ತೊಂದು ರೂಪ..  ಇಂದು ವ್ಯಾಲೆಂಟೈನ್ಸ್ ಡೇ.. ನೀ ಕಳುಹಿಸಿದ ಪಿಂಕ್ ಗುಲಾಬಿಗಳು ನನ್ನ ರೂಂ ನಲ್ಲಿರುವ ವಾಸ್ ನಲ್ಲಿ ಅಮ್ಮನಿಗೆ   ಕೊಂಡು ತಂದೆ ಅಂತ ಸುಳ್ಳು ಹೇಳಿ   ಇಟ್ಟಿದ್ದೇನೆ .. ನಾಳೆ ಮನೆಗೆ ಬಂದಾಗ ನೋಡು.. ಥ್ಯಾಂಕ್ಸ್ ಚಾಕೊಲೆಟ್ ಗಳಿಗೆ.. ಅದ್ಯಾಕೋ ಅಷ್ಟು ದುಡ್ಡು ಖರ್ಚು ಮಾಡಿದೆ ಇವಕ್ಕೆಲ್ಲಾ.. ಪಾಪ ನೀನು ಎಷ್ಟು ನೋಟ್ಸ್ ಫೋಟೋ ಕಾಪಿ   ಮಾಡಿಸಿಕೊ ಬೇಕು.. ಯಾಕೋ ಗಿಲ್ಟಿ ಆಗ್ತಾ ಇದೆ.. ಇಷ್ಟು ಖರ್ಚು ಮಾಡಿಸಿದ್ದಕ್ಕೆ.. ಐ ಲವ್ ಯು  ಕಣೋ.. ನಾಳೆ ಬಾ ಮನೆಗೆ ಅಮ್ಮನಿಗೆ ಹೇಳಿ ನಿನಗಿಷ್ಟವಾದ ತಿಂಡಿ ಮಾಡಿಸ್ ಇತ್ತಿರ್ತೀನಿ,,, ಬೈ ಅಪ್ಪ ಬಾರೋ ಹೊತ್ತಾಯ್ತು.. ಪತ್ರ ಓದಿದ ತಕ್ಷಣ ಒಂದು ಮಿಸ್ ಕಾಲ್ ಕೊಡೊ .. ಅಷ್ಟು ಸಾಕು!
ನಿನ್ನವಳು 

Thursday, 13 February 2014

ಕೆಂಗುಲಾಬಿ.....!


ಮತ್ತೊಂದು ವ್ಯಾಲಂಟೈನ್ಸ್  ಡೇ..ನಿನ್ನ ಪ್ರೇಮ ಪತ್ರ ಜೊತೆಗೊಂದು ಕೆಂಗುಲಾಬಿ .. ಅದನ್ನು ಮುಟ್ಟಲು ಅದ್ಯಾಕೋ ಹಿಂಜರಿತ ಗೆಳೆಯ ! ಮತ್ತದೇ ನೆನಪುಗಳು ನೋವುಗಳು ಹೃದಯದ  ಮೇಲಾದ ಗೀರುಗಾಯಗಳು.. ಹೆಪ್ಪುಗಟ್ಟಿರುವ ನೆನಪುಗಳು ಎಲ್ಲವು ನನ್ನದು-ನಿನ್ನದು ಸೇಮ್ ಟು ಸೇಮ್  ಆದರೆ ನಮ್ಮ ಜೊತೆಗಿನ ಪತ್ರಗಳು , ಸನ್ನಿವೇಶಗಳು ಬೇರೆ ಬೇರೆ ! ನನ್ನ ಕಣ್ಣ ಕೆಳಗಿನ ಗೀರು.. ತುಸು ಕಪ್ಪು ಚರ್ಮ ನಿನ್ನೆಯ ಕಥೆಗಳಿಗೆ ಉದಾಹರಣೆ.. ನಿದ್ರೆ ಇಲ್ಲದ ರಾತ್ರಿಗಳ ಕಥೆ ಹೇಳುತ್ತಿದೆ..!!  ನಿನ್ನ ನೋಟದಲ್ಲಿ ಇರುವ ಅಸೀಮ ನಿರ್ಲಿಪ್ತತೆ , ನಕ್ಕರು ಬಿಗಿದ ಆ ತುಟಿಗಳ ಕಥೆಯ ಒಳ ಸಿದ್ಧಾಂತ ಅದೇ ನೋವಲ್ಲವೇ? ಅಂದು ನಿನ್ನವಳ ಮಾತಿಗೆ ಮುಗುಳ್  ನಕ್ಕಿದ್ದ ತುಟಿಗಳು  ಇಂದು ನನ್ನ ಕಂಡು ಬಿರಿದಾಗ ಯಾಕೋ ಅದು ನನ್ನದಲ್ಲದ್ದು ಅನ್ನಿಸಿತ್ತು..ಪತ್ರದ ಮೇಲಿದ್ದ ಕೆಂಗುಲಾಬಿಯದ್ದು ಅಪರೂಪದ ಬಣ್ಣ. ಆದರೆ ಹೈಬ್ರಿಡ್ ಹೂವಲ್ಲವೆ  ಗಂಧದ ಘಮಲೆ ಇಲ್ಲ. ಈ ಪ್ರೀತಿಯನ್ನು ಸ್ವೀಕರಿಸಲೋ ಬೇಡವೋ ಎನ್ನುವ ಹುಯ್ದಾಟ ನನ್ನದು ! ಹೈಬ್ರಿಡ್ ಗುಲಾಬಿ ಬಣ್ಣದಲ್ಲಿ ಚಂದ ಹುಡುಗಾ.. ಘಮಲಲ್ಲಿ ಅಲ್ಲ! ಸಾರಿ  ನಿನ್ನ ಮನಸ್ಸು ನೋಯಿಸುತ್ತಿದ್ದೇನೆ.. ಆದರು ಎಲ್ಲಿಯೋ ನಿನ್ನ ಬಗ್ಗೆ ಇರುವ ಆ ಸಾಫ್ಟ್ ಕಾರ್ನರ್ ನಮ್ಮಿಬ್ಬರನ್ನು ಒಂದು ಮಾಡ ಬಹುದೇನೋ ಗೊತ್ತಿಲ್ಲ.. ಆಗ ಈ ಗುಲಾಬಿ ಬದಲು ಮಧುರ ಮಲ್ಲಿಗೆ ತಾ ಮುಡಿಗೇರಿಸಿ ಸಂತೋಷಿಸುತ್ತೇನೆ. ಅಲ್ಲಿವರೆಗೂ ಸಮಯ ನೀಡು!ಸಾಧ್ಯವಾದರೆ!!

Friday, 7 February 2014

ಒಕ್ಕಲಿಗರು.



ಕಳೆದ ಕೆಲವು ದಿನಗಳಿಂದ ಲಾರ  ಇಂಗಲ್ಸ್ ಅವರ ಕಥೆ ಓದ್ತಾ ಇದ್ದೀನಿ. ನನ್ನ ಇಷ್ಟದ ಪುಸ್ತಕಗಳಲ್ಲಿ ಲಾರ ಇಂಗಲ್ಸ್ ವೈಲ್ಡರ್ ರಚನೆಗಳು  ಸಹ ಒಂದು. ಅವರ ಪುಸ್ತಕಗಳನ್ನು  ಕನ್ನಡಕ್ಕೆ ಎಸ್. ಅನಂತ ನಾರಾಯಣ ಅವರು. ಅತ್ಯಂತ ಸುಂದರ ನಿರೂಪಣೆ ಮಾಡಿದ್ದಾರೆ ದಿ. ಅನಂತ್ ನಾರಾಯಣ ಅವರು.
ಇಲ್ಲಿ ಬರುವ ಪಾತ್ರಧಾರಿಗಳು ಪ್ರಕೃತಿಯ ಮಕ್ಕಳು . ಅನ್ನದಾತರು. ಒಂದು ಕಾಡಿನಲ್ಲಿ ಅದರಲ್ಲೂ 1880 ರ ಇಸವಿಯಲ್ಲಿನ ಅಮೇರಿಕ ಬದುಕನ್ನು ಅದರಲ್ಲಿ ತಿಳಿಸಲಾಗಿದೆ. ಎಲ್ಲವು ಮತ್ತೆ ಮತ್ತೆ ಓದುವ ಆಸೆ ಉಂಟಾಗುತ್ತದೆ.  ಧರ್ಮಗಳ  ಯಾವುದೇ ಸಂಕೋಲೆ ಇಲ್ಲದೆ ಪ್ರಕೃತಿಯನ್ನೇ ನಂಬಿದ ಕುಟುಂಬಗಳೇ  ಆ ಪುಸ್ತಕದ ಮುಖ್ಯ ಸಂಗತಿಗಳು . ಹೆಣ್ಣಿಗಿರುವ ಸಮಾನತೆ, ಆಕೆಗೆ ನೀಡುವ ಗೌರವ ಎಲ್ಲವು ಮಾದರಿ. ಒಕ್ಕಲಿಗ ಜಾತಿ ಅನ್ನುವುದಕ್ಕಿಂತ ಕೆಲಸ ವೃತ್ತಿ ಎನ್ನುವುದು ಸೂಕ್ತ. ಯಾರು ಶ್ರಮಜೀವಿಯೊ ಅವರೆಲ್ಲ ಒಕ್ಕಲಿಗರೇ. ಯಾರು ಹೊಸತರ ಬಗ್ಗೆ ಪ್ರಕೃತಿ ಮಾತೆಯ  ಬಗ್ಗೆ ಪ್ರೀತಿ ಹೊಂದಿರುವವರೆಲ್ಲರೂ ಒಕ್ಕಲಿಗರು.
ಇವೆಲ್ಲ ಯಾಕೆ ಹೇಳೋಕೆ ಹೊರಟೆ ಅಂದ್ರೆ ಇತ್ತೀಚಿಗೆ ನನ್ನ ಕಸಿನ್ ರಶ್ಮಿ ಮಗುವಿನ ನಾಮಕರಣ  ರಾಜರಾಜೇಶ್ವರಿ ನಗರದಲ್ಲಿ ಆಯಿತು. ಅಲ್ಲಿ ಹಾಗೆ ಅಡ್ಡಾಡುವಾಗ ಒಂದು ಬ್ಯಾನರ್ ಕಣ್ಣಿಗೆ ಬಿತ್ತು. ಅದರಲ್ಲಿ ಸಂಕ್ರಾಂತಿ ಹಬ್ಬದ ಹಾರೈಕೆ ಇತ್ತು.. ಜೊತೆಗೆ ಆ ಮಹನೀಯರು ಒಕ್ಕಲಿಗ ಗೌಡಾಸ್ ಹಬ್ಬ ಸಂಕ್ರಾಂತಿ ಎಂದಿತ್ತು  ( ಬೆಳೆ ಬೆಳೆಯುವವರು ತಾವು ಮಾತ್ರ ಎನ್ನುವ ಮನಸ್ಥಿತಿ ಹೊಂದಿರುವುದು  ಎದ್ದು ಕಾಣುತ್ತಿತ್ತು) ಸಕತ್ ನಗು ಬಂತು ನನಗೆ ಅದನ್ನು ಓದಿ . ಯಾಕೆಂದ್ರೆ ಒಕ್ಕಲಿಗ ಎನ್ನುವ ಅರ್ಥ ತಿಳಿಯದವರು ಮಾತ್ರ ಹೀಗೆಲ್ಲಾ ಹೇಳಿಕೊಂಡು ತಿರುಗೋದು. ಅಂತಹವರು ಲಾರ ಇಂಗಲ್ಸ್ ವೈಲ್ಡರ್   ಬರೆದ ಪುಸ್ತಕ ಆದ ಬೇಕು.. ಆಗ ತಿಳಿಯುತ್ತೆ ಒಕ್ಕಲುತನದ ಪ್ರಾಮುಖ್ಯತೆ, ಅದಕ್ಕಿರುವ ಗೌರವ ! 

Wednesday, 29 January 2014

ಪುಟ್ಟ ಗೆಳೆಯ


ಪ್ರೀತಿಯ ಪುಟ್ಟ ಗೆಳೆಯ,
ಮತ್ತೆ ನಾನು ಹೇಳುವ ಮಾತುಗಳು ನನ್ನಲ್ಲೇ ಉಳಿದು ಬಿಡ್ತಾ ಇದೆ ಅಂತ ಅನ್ನಿಸುತ್ತಿದೆ ಗೆಳೆಯಾ.. ಗೊತ್ತಿಲ್ಲ ಯಾಕೆ ಹೀಗಾಗಿದೆ ಅಂತ. ವಯಸ್ಸಿನಲ್ಲಿ ನೀನು ತುಂಬಾ ಚಿಕ್ಕವನು. ಆದರೆ ನೀನು ಅದ್ಯಾಕೆ ನನ್ನ ಬಗ್ಗೆ ಈ ಪರಿಯ ಆಸಕ್ತಿ ತೋರಿಸ್ತಾ ಇದ್ದೀಯ ಅನ್ನೋದೇ ನನಗೆ ಗೊತ್ತಾಗುತ್ತಿಲ್ಲ. ನಿನ್ನ ಸಾಂಗತ್ಯದ ಮಧುರವಾದ ನೆನಪಲ್ಲಿ ನನಗೆ ಒಮ್ಮೊಮ್ಮೆ ಆಗುವ ಬೇಸರಕ್ಕೆ  ಖಂಡಿತಾ ನೀನಲ್ಲ. ಮನದಲ್ಲಿ ಹುದುಗಿರುವ  ಕಹಿ ನೆನಪುಗಳು ಆಗಾಗ ಕದಡುವಂತೆ ಮಾಡುವ ನನ್ನ ಬದುಕಿನ ಭಾವಭಿತ್ತಿಯಲ್ಲಿ ಅಡಗಿರುವ ನೋವಿನ ಮೂಟೆಯನ್ನು ಬಿಚ್ಚಿ ಹೇಳುವ ತವಕ ನನಗಿಲ್ಲ.
ಮದುವೆ ಕನಸ ಬಿಟ್ಟು ದೂರ ಉಳಿದವಳಿಗೆ ಈಗ ಮತ್ತೆ ವಸಂತವಾಗುವ, ಹಸಿರಾಗುವ , ಚಿಗುರಾಗುವ ಹಂಬಲವಿಲ್ಲ  . ನಿನ್ನ ಹಟವ ನಾ ಬಲ್ಲೆ. ಇದು ತಪ್ಪಲ್ಲ! ಆದರೆ ಯಾವುದು ಸ್ವೀಕರಿಸಲು ಮನವಿಲ್ಲದ ನನಗೆ ಮತ್ತೆ ಹೊಸ ಬದುಕಿನ ಬಗ್ಗೆ ಆಸೆಯಿಲ್ಲ. ಬೇಡ ಅನ್ನಿಸುವ ಬೇಕುಗಳು, ಬೇಕೇ ಬೇಕು ಎನ್ನುವ ಆಶಯಗಳು ಎಲ್ಲವನ್ನು ನಾನು ಹೇಳುವ ಹಾಗಿಲ್ಲ.. ಅರ್ಥ ಮಾಡುವ ತಾಖತ್ತು ನನ್ನಲ್ಲಿ ಉಳಿದಿಲ್ಲ. ಅದಕ್ಕೆ ವಯಸ್ಸಾದ ನೆಪವಿಟ್ಟು ಬದುಕ ನಡೆಸುತ್ತಿದ್ದೇನೆ. ಮರೆತು ಬಿಡು ಪುಟ್ಟ ಗೆಳೆಯ.. ಬದುಕು ದೊಡ್ಡದು.. ನಿನ್ನ ದಾರಿ ದೊಡ್ಡದು. ಅಲ್ಲಿ ನಿನ್ನ  ಭರವಸೆ ಇದೆ.. ನಾನು ಎಂದಿಗೂ  ಕೆತ್ತಲಾಗದ ಕಲ್ಲು.. ಬರೆಯಲಾಗದ ಹಾಳೆ..
.........
ಗೆಳತಿ !

Monday, 27 January 2014

ಈ ಸಂಬಂಧಕ್ಕೇನು ಹೆಸರು ?




ಪ್ರೀತಿಯ ಹುಡುಗಾ, 
ಕೆಲವು ಸಂಬಂಧಗಳು ಹಾಗೆ ಕಣೋ ಚಿನ್ನ ಹೇಳೋಕೆ ಆಗಲ್ಲ, ಇನ್ನು ಅದನ್ನು ಬಿಡಿಸಿಡುವ ಪ್ರಯತ್ನ ಮಾಡೋಕೆ ಹೋದರೆ ಸಿಕ್ಕೋದು ಬಿಡಿಸಲಾಗದ ಸಿಕ್ಕು, ಅರ್ಥವಾಗದ ಸಂಗತಿಗಳು.. ನನ್ನ ಮುದ್ದು ಹುಡುಗ  ಇದನ್ನು ಯಾವ ಲೇಖಕ ಹೇಗೆ ಬೇಕಾದರೂ ಕರಿಯಲಿ, ಮದುವೆಯಾಚಿಗಿನ ಸಂಬಂಧ  , ಮದುವೆ ನಂತರದ ಬಾಂಧವ್ಯ, ಅದರಾಚೆ ಇರುವ ಕೊಂಡಿ ಯಾವುದೇ ಆಗಿರಲಿ ಆದರೆ ಇದರ ಅರ್ಥವೂ ನನಗೂ- ನಿನಗೂ ಗೊತ್ತಿದ್ದರೆ ಸಾಕು ಕಣೋ ದಡ್ಡ. ಇಲ್ಲಿ ನಮಗೆ ಆಕರ್ಷಣೆ ಇದ್ದರು ಅದು ದೇಹದ್ದಲ್ಲ  ಎನ್ನುವುದು ಸ್ಪಷ್ಟ. ಯಾಕೆಂದರೆ ನೀನು ಸಂತೃಪ್ತ ಕುಟುಂಬದ ಯಜಮಾನ, ನಾನು ಅಷ್ಟೇ. ಆದರು ಮನದಲ್ಲಿ ಬೇರೂರಿದ ಆ ಕೊರತೆಯ ಕಠೋರತೆಗೆ ಬೆಚ್ಚಿ ಬಯಸುವ ಸಾಂಗತ್ಯವನ್ನು ವಿಚಿತ್ರ ಸಂಬಂಧ ಎಂದು ಅರ್ಥೈಸುವುದು ಎಷ್ಟು ಸರಿ? ನನ್ನ ಖಾಲಿ ಹಾಳೆಯ ಅಕ್ಷರ ನೀನು, ನಿನ್ನ ಕವನಗಳ ಜೀವ ನಾನು. ನಗು ಬರುತ್ತೆ ಅಲ್ವಾ ಇಂತಹ ವೈಪರಿತ್ಯ ನೋಡಿದರೆ.. ಗೆಳೆಯಾ ನಿನ್ನನ್ನು ನಾನು ಪ್ರೀತಿಯಿಂದ ಹುಡುಗಾ ಅಂತ ಕರೀತೀನಿ. ಯಾಕೆಂದ್ರೆ ನೀನು ನನ್ನ ಬಾಲ್ಯದ ಕಳೆದು ಹೋದ ಕನಸು, ನಾ ನಿನ್ನ ಬದುಕಿನ  ನಿರಂತರ ಭಾವಲಹರಿ. ಹರಿದ ಕನಸುಗಳು, ಛಿದ್ರವಾದ ಮನಸುಗಳು, ಒಡೆದ ಕಥೆಗಳ ನಡುವೆ ನಾವಿಬ್ಬರು ಇನ್ನು ಬದುಕಿದ್ದೇವೆ ಅಂದರೆ ಪ್ರಾಯಶಃ  ನೀ ನನಗೆ ಮತ್ತು ನಾ ನಿನಗೆ ಸಿಕ್ಕುವ  ಸಾಧ್ಯತೆಗಳು ಇತ್ತು ಎಂದು ಕಾಣುತ್ತದೆ. ಅದೆಷ್ಟು ದಿನಗಳಿಂದ ಕಾದಿದ್ದೆ ನನಗಾಗಿ.. ಹಾಗೆ ನಾ ನಿನಗಾಗಿ. ಎಲ್ಲೆ ಮೀರುವ- ಎಲ್ಲೂ ಮೀರದ ಪ್ರೀತಿಯ ಒಡನಾಟದ ಸಖ್ಯ ಅದೆಷ್ಟು ಹಿತಾನುಭವ ಇಬ್ಬರಿಗೂ ಅಲ್ವಾ?  ಹೇಳು ಎನ್ನರಸ. ! ಮದುವೆ ಮಕ್ಕಳು, ದಾಪತ್ಯ, ಜಂಜಾಟ ಇವೆಲ್ಲದರ ನಡುವೆ ಹಾಯಿ ಗಾಳಿ ತಂಗಾಳಿಯಾಗಿ ನೀ ಸಿಕ್ಕೆ ಅಂದರೆ ಪೂರ್ವಜನ್ಮದ ಮೇಲೆ ನನಗೆ ಸಿಕ್ಕಾಪಟ್ಟೆ ನಂಬಿಕೆ ಆಗ್ತಾ ಇದೆ. ಅಲ್ಲಿ ನಾ-ನೀ ಏನಾಗಿರ ಬಹುದು, ತಾಯಿ ಮಗ, ತಂದೆ ಮಗಳು, ಗೆಳೆಯ ಗೆಳತಿ, ಅಪೂರ್ಣವಾದ ಪ್ರೆಅಮ ಜೀವಗಳು, ಗಂಡ ಹೆಂಡತಿ, ಅಪರೂಪದ ಪ್ರೇಯಸಿ-ಪ್ರಿಯಕರ. ಮನುಷ್ಯರೇ ಆಗ ಬೇಕು ಎಂದೇನು ಇಲ್ಲ ಜಕ್ಕವಕ್ಕಿಗಳು, ತರುಲತೆ, ಹೂ ಬಳ್ಳಿ, ಏನು ಏನೆಂಬ ಪ್ರಶ್ನೆ ಉತ್ತರ ಹುಡುಕುತ್ತ ಕೂರುವ ಬದಲು, ಇರುವಷ್ಟು ಸಮಯ ಖುಷಿಯಾಗಿರೋಣ ಚೆನ್ನ.. ನನ್ನ ಚಿನ್ನ ಏನಂತೀಯ ? 
ಇಂತಿ 
ನಿನ್ನವಳಾ ?   

Sunday, 19 January 2014

ನೆಪ !



ಹೆಚ್ಚೇನೂ ಮಾತುಗಳಿಲ್ಲ
ನಿನಗೆ ತಿಳಿಸಲು ಗೆಳೆಯಾ 
ಆದರೂ ಅತಿ... 
ಹೆಚ್ಚು ಭಾವನೆಗಳ
ತಿಳಿಸುವ ಬಯಕೆ!
ಆಸೆಗೆ ಮಿತಿಯಿಲ್ಲ
ನಿಜ!
ಹಾಗೆಂದು ಇದ್ದು ಬಿಡಲು 
ಒಲ್ಲದು ಈ ಮನ 
ಬದುಕಿನ ಮಜಲುಗಳ
ಗೋಜಲಲ್ಲಿ ಕಾಡುವ 
ಹನಿಹನಿಯ ನೆನಪು
ನಿನ್ನ ನೆನಪಿಸಿಕೊಳ್ಳಲು 
ಮಾಡುವ ಒಂದು 
ಕುಂಟು ನೆಪ !

Followers